ಬ್ರಾಹ್ಮ-ಕ್ಷಾತ್ತ್ರಸಮಾಹಾರ - ಕೃಷ್ಣ, ಚಾಣಕ್ಯ, ವಿದ್ಯಾರಣ್ಯ
ಭಾರತೀಯ ಪರಂಪರೆಯಲ್ಲಿ ಬ್ರಾಹ್ಮ-ಕ್ಷಾತ್ತ್ರಗಳ ಸಮಾಯೋಗಕ್ಕೆ ಬಹುಕಾಲದಿಂದ ಪ್ರಾಶಸ್ತ್ಯವಿದೆ. ವೇದಗಳಲ್ಲಿಯೇ ಇದರ ಮಹತ್ತ್ವದ ಪ್ರಸ್ತಾವವುಂಟು. ಇಲ್ಲಿ ಸೂಚಿತವಾದ ಬ್ರಾಹ್ಮ ಮತ್ತು ಕ್ಷಾತ್ತ್ರಗಳನ್ನು ಕೇವಲ ಹುಟ್ಟಿನಿಂದ ಬರುವ ಜಾತಿ ಅಥವಾ ವರ್ಣಗಳ ಚೌಕಟ್ಟಿನೊಳಗೆ ಪರಿಮಿತಗೊಳಿಸಿ ನೋಡುವುದು ಯುಕ್ತವಲ್ಲ. ಇವೆರಡೂ ಮೂಲತಃ ಸಮಾಜವನ್ನು ಮುನ್ನಡಸುವ ತತ್ತ್ವಗಳು. ಬ್ರಾಹ್ಮ-ಕ್ಷಾತ್ತ್ರಗಳು ವಿಶಾಲವಾದ ಸಮಾಜದ ಎಲ್ಲ ಸ್ತರಗಳಿಂದ, ಎಲ್ಲ ಸಮುದಾಯಗಳಿಂದ ಹೊಮ್ಮಿಬರಬಹುದಾದ ಉತ್ಕೃಷ್ಟತೆಯ ಸಂಕೇತಗಳು. ಆದುದರಿಂದಲೇ ಅಪ್ಪಟ ಬ್ರಾಹ್ಮ-ಕ್ಷಾತ್ತ್ರಗಳ ಸಂಖ್ಯೆ ಎಂದಿಗೂ ಕಡಮೆ. ಗಡಿಗೆಯ ಪ್ರಮಾಣದ ಹಾಲಿನಲ್ಲಿ ಅಡಗಿರಬಹುದಾದ ಗಜ್ಜುಗದ ಗಾತ್ರದ ಬೆಣ್ಣೆ ಅಥವಾ ತುಪ್ಪಕ್ಕೆ ಇದು ಸಂವಾದಿ. ಈ ವಿಚಾರವನ್ನು ಮತ್ತಷ್ಟು ವಿಶದವಾಗಿ ಮನಗಾಣಬಹುದು.