ಸಂಸ್ಕೃತದಲ್ಲಿ ಸ್ಮರಲೇಖ – 2
ನಾವಿನ್ನು ಶಕುಂತಲೆಯ ಪ್ರಣಯಪತ್ರದತ್ತ ತಿರುಗಬಹುದು. ಆಕಸ್ಮಿಕವಾಗಿ ಆಶ್ರಮಕ್ಕೆ ಬಂದ ದುಷ್ಯಂತನನ್ನು ಕಂಡು ಶಕುಂತಲೆ ಮನಸೋತಿದ್ದಾಳೆ. ಅವನಾದರೂ ಈಕೆಯಲ್ಲಿ ನಿರ್ಭರಾನುರಾಗವನ್ನು ಹೊಂದಿದ್ದಾನೆ. ಆದರೆ ಇಬ್ಬರಿಗೂ ತಮ್ಮ ಪ್ರಣಯವು ಏಕಮುಖವೇನೋ ಎಂಬ ಅಳುಕುಂಟು. ಈ ಕಾರಣದಿಂದಲೇ ಅವರಿಗೆ ತೀವ್ರವಿರಹವೇದನೆ. ಸ್ವಭಾವಸುಕುಮಾರಿಯಾದ ಶಕುಂತಲೆಯು ತನ್ನ ಈ ಪ್ರಥಮಪ್ರಣಯಪಾರವಶ್ಯದಿಂದಲೂ ತತ್ಫಲಿತವಾದ ಅದಮ್ಯವಿರಹದಿಂದಲೂ ಎಣೆಮೀರಿ ಬಳಲಿದ್ದಾಳೆ. ಕಣ್ವಾಶ್ರಮದ ಮಾಲಿನೀನದಿಯ ತೀರದಲ್ಲಿ ಅವಳ ಸಖಿಯರು ಕೋಮಲಕಮಲದಳಗಳ ಶಿಶಿರಶಯ್ಯೆಯನ್ನೂ ಕಲ್ಪಿಸಿದ್ದಾರೆ. ಆದರೆ ಈ ಎಲ್ಲ ತಾಪೋಪಶಾಂತಿಪ್ರಕಲ್ಪಗಳೂ ನಿಷ್ಪ್ರಯೋಜಕವಾಗಿವೆ. ಆಗ ಗೆಳತಿಯರು ಅವಳಿಗೆ ಮದನಲೇಖನವನ್ನು ರಚಿಸುವ ಸಲಹೆಯನ್ನೀಯುತ್ತಾರೆ.